ಸಿನಿಮಾ ಸುದ್ದಿ

ಕನ್ನಡಕ್ಕೆ ಬಂದಳು ಮತ್ತೊಬ್ಬ ಚಾಂದಿನಿ ಕುಟ್ಟಿ

ಒಂದು ವರ್ಷದ ಹಿಂದೆ ಮೂಹೂರ್ತ ಕಂಡ ‘ಶ್ರೀಕಂಠ’ ಸಿನಿಮಾ ತೆರೆಗೆ ಬರುತ್ತದೆಯೇ ಎನ್ನುವ ಡೌಟ್ ಬಹಳಷ್ಟು ಗಾಂಧಿನಗರದ ಮಂದಿಗೆ ಬಂದಿತ್ತು. ಅದರಲ್ಲೂ ಮುಖ್ಯವಾಗಿ ನಿರ್ದೇಶಕ ಮಂಜು ಸ್ವರಾಜ್ ತಮ್ಮ ಚಿತ್ರದ ಕುರಿತು ಪದೇ ಪದೇ ಹೇಳಿಕೊಂಡು ತಿರುಗಾಡುತ್ತಾ ಚಿತ್ರವನ್ನು ಜೀವಂತವಾಗಿ ಉಳಿಸಿಬಿಟ್ಟಿದ್ದರು. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಡಾ. ಶಿವರಾಜ್ ಕುಮಾರ್ ಹಾಗೂ ವಿಜಯ ರಾಘವೇಂದ್ರ ಕಾಣಿಸಿಕೊಳ್ಳುವ ಕುರಿತು ಮಾತುಕತೆ ನಡೆದಿತ್ತು.
ಈಗಲೂ ಅವರೇ ನಾಯಕರು ಎಂದು ಹೇಳಿಕೊಂಡು ಬಂದಿದ್ದ ನಿರ್ದೇಶಕ ಚಿತ್ರಕ್ಕೆ ಹೊಸ ನಾಯಕಿಯನ್ನು ಹುಡುಕುವ ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ ಎನ್ನುವ ಮೂಲಕ ಚಿತ್ರ ಕುರಿತು ಆಗಾಗ ಎದ್ದು ಕೂರುತ್ತಿದ್ದ ಗಾಸಿಫ್‌ಗಳಿಗೆ ತೆರೆ ಎಳೆದು ಬಿಟ್ಟಿದ್ದರು. ಆದರೆ ಇನ್ನೂ ಮುಂದೆ ನಿರ್ದೇಶಕರು ನಾಯಕಿಯ ಮಾತು ಹೇಳಿಕೊಂಡು ಸಮಜಾಯಿಸಿ ಕೊಡುವ ಕಾರ‍್ಯಕ್ಕೆ ಈಗ ಮುಕ್ತಿ ಸಿಕ್ಕಿದೆ. ಚಿತ್ರಕ್ಕೆ ಮಲೆಯಾಳಿಯೊಬ್ಬರು ಎಂಟ್ರಿ ಕೊಡುತ್ತಿದ್ದಾರೆ.
ಅಮೆರಿಕ ಮೂಲದ ಕೇರಳದ ನಟಿ ಚಾಂದಿನಿ ಶ್ರೀಧರನ್ ಶ್ರೀ ಕಂಠ ಚಿತ್ರದ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ. ಈ ಮೂಲಕ ಕನ್ನಡಕ್ಕೆ ಮತ್ತೊಂದು ನಟಿ ಮಲಯಾಳಿ ಅಂಗಳದಿಂದ ರವಾನೆಯಾಗಿದೆ. ಚಿತ್ರದಲ್ಲಿ ಪ್ರೇಮ ಕತೆಗೆ ಮೊದಲ ಅದ್ಯತೆ ನೀಡಿರುವ ಕಾರಣ ಪ್ರೇಮಿಸಂ ಚಿತ್ರ ಎನ್ನಬಹುದು. ಅಂದಹಾಗೆ ತಮಿಳು, ಮಲೆಯಾಳಿ ಚಿತ್ರಗಳಲ್ಲಿ ಈಗಾಗಲೇ ಚಾಂದಿನಿ ಬಣ್ಣಹಾಕಿಕೊಂಡು ಗಮನ ಸೆಳೆದು ಬಿಟ್ಟಿದ್ದಾರೆ.