ದೊಡ್ಡ ಸುದ್ದಿ ಸಿಟಿ ಸುದ್ದಿ

ಇಯರ್ ಪೋನ್‌ನಿಂದ ವಿದ್ಯಾರ್ಥಿ ಸತ್ತು ಹೋದ

ಕಾಸರಗೋಡು ರೈಲು ನಿಲ್ದಾಣ ಸಮೀಪ ಶುಕ್ರವಾರ ಸಂಜೆ ಕಿವಿಯಲ್ಲಿ ಇಯರ್ ಫೋನ್ ಇಟ್ಟುಕೊಂಡು ರೈಲು ಹಳಿಯ
ಬದಿಯಲ್ಲಿ ತೆರಳುತ್ತಿದ್ದ ಎಂಜಿನಿಯರ್ ವಿದ್ಯಾರ್ಥಿ ರೈಲು ಡಿಕ್ಕಿಯಾಗಿ ಮೃತಪಟ್ಟಿದ್ದಾರೆ. ಮೃತಪಟ್ಟ ವಿದ್ಯಾರ್ಥಿಯನ್ನು ತ್ರಿಶ್ಯೂರ್ ಕುನ್ನಂಕುಳ ನಿವಾಸಿ ರವಿ ಕುಮಾರ್ ಎಂಬವರ ಪುತ್ರ ಕಾಸರಗೋಡು ಎಲ್‌ಬಿಎಸ್ ಎಂಜಿನಿಯರಿಂಗ್ ಕಾಲೇಜು ಪ್ರಥಮ ವರ್ಷ ವಿದ್ಯಾರ್ಥಿ ಕೆ.ಆರ್. ವೈಶಾಖ್ (23) ಎಂದು ಗುರುತಿಸಲಾಗಿದೆ.

ಕಾಲೇಜಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಊರಿಗೆ ತೆರಳಲು ರೈಲು ನಿಲ್ದಾಣಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ
ನಡೆದಿದೆ. ಮೊಬೈಲ್‌ನ ಇಯರ್‌ಫೋನ್ ಕಿವಿಗೆ ಅಳವಡಿಸಿ ರೈಲು ಹಳಿ ಸಮೀಪದಲ್ಲಿಯೇ ತೆರಳುತ್ತಿದ್ದ ಸಂದರ್ಭದಲ್ಲಿ ರೈಲು ಬಂದ ಶಬ್ದ ಕೇಳಿಸದೇ ರೈಲು ಡಿಕ್ಕಿಯಾಗಿದೆ.

ರೈಲು ಬರುತ್ತಿರುವ ಬಗ್ಗೆ ಅಲ್ಲಿದ್ದ ಕೆಲವರು ಆತನನ್ನು ಬೊಬ್ಬೆ ಹೊಡೆದು ಕರೆದು, ಎಚ್ಚರಿಸಿದರೂ ಸಹ ಆತನಿಗೆ ಕೇಳಿಸಲಿಲ್ಲ. ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮನೆಯವರಿಗೆ ಬಿಟ್ಟುಕೊಡಲಾಗಿದೆ.